ಮಧ್ಯಾಹ್ನದವರೆಗೂ ಮುಂದುವರೆದ ಗಣೇಶ ವಿಸರ್ಜನೆ: ಖಾಸ ಬಾವಿಯಲ್ಲಿ ಗಣಪತಿಗೆ ಬೀಳ್ಕೊಡುಗೆ. ರಾಯಚೂರು,ಸೆ.16- ನಗರದಲ್ಲಿ ಪ್ರತಿಷ್ಟಾಪನೆ ಮಾಡಿರುವ ಸಾರ್ವಜನಿಕ ಗಣೇಶೋತ್ಸವದ ವಿಸರ್ಜನಾ ಮೆರವಣಿಗೆ ಭವ್ಯ ರೀತಿಯಲ್ಲಿ ಭಾರಿ ಸಂಭ್ರಮ ಸಡಗರದಿಂದ ನೆರವೇರಿತು. ನಿನ್ನೆ ತಡರಾತ್ರಿಯಿಂದ ಆರಂಭವಾದ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಮಧ್ಯಾಹ್ನದವರೆಗೂ ಮುಂದುವರೆಯಿತು.
ನಗರದ ಮಾವಿನ ಕೆರೆ ಬಳಿಯ ಐತಿಹಾಸಿಕ ಖಾಸ ಬಾವಿ ಬಳಿ ಗಣೇಶ ಮೂರ್ತಿಗಳು ವಿಸರ್ಜನೆಗೆ ಸಾಲುಗಟ್ಟಿದ್ದವು. ಎರೆಡು ಬೃಹತ್ ಕ್ರೇನ್ ಗಳು ಗಣೇಶ ಮೂರ್ತಿಗಳನ್ನು ಬಾವಿಯಲ್ಲಿ ವಿಸರ್ಜನೆ ಮಾಡಲು ನಿಯೋಜನೆಗೊಂಡಿದ್ದವು.
ಜಿಲ್ಲಾಡಳಿತ ಮತ್ತು ನಗರಸಭೆಯಿಂದ ಗಣೇಶ ವಿಸರ್ಜನೆಗೆ ಸಕಲ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು .ಸ್ಥಳದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಅಗ್ನಿ ಶಾಮಕ ದಳ ಸಿಬ್ಬಂದಿಗಳು ಬಾವಿ ಬಳಿ ಸುರಕ್ಷಾ ಕ್ರಮಗಳನ್ನು ಕೈಗೊಂಡಿದ್ದರು. ನಗರದ ಪ್ರಮುಖ ಬೀದಿಗಳು ಕೇಸರಿ ಬಣ್ಣ ಮತ್ತು ಗುಲಾಲುಗಳಿಂದ ವರ್ಣಮಯವಾಗಿತ್ತು.
ಖಾಸ ಬಾವಿ ಬಳಿ ಅಪಾರ ಸಂಖ್ಯೆಯಲ್ಲಿ ಜನರು ನೆರೆದು ಗಣೇಶನಿಗೆ ವಿದಾಯ ಹೇಳಿ ಮುಂದಿನ ವರ್ಷ ಮರಳಿ ಬರುವಂತೆ ಭಕ್ತಿಯಿಂದ ಪ್ರಾರ್ಥಿಸಿದರು. ಒಟ್ಟಾರೆ ಗಣೇಶ ವಿಸರ್ಜನೆ ಶಾಂತಿಯುತವಾಗಿ ನೆರವೇರಿತು.
Comments
Post a Comment