ಸ್ವರಾಜ್ಯದ ಸಿಂಹಗರ್ಜಕ - ಛತ್ರಪತಿ ಶಿವಾಜಿ ಮಹಾರಾಜರು ಭಾರತ ಭೂಖಂಡವು ಅನೇಕ ವೀರರ, ಮಹನೀಯರ, ಧರ್ಮಪರರ ಜನ್ಮಭೂಮಿ. ಧೈರ್ಯ, ಧರ್ಮನಿಷ್ಠೆ, ಸ್ವಾಭಿಮಾನ ಮತ್ತು ಪ್ರಜಾಹಿತ ಚಿಂತನೆಗಳನ್ನು ಒಟ್ಟುಗೂಡಿಸಿಕೊಂಡ ಮಹಾನ್ ರಾಜರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಅಗ್ರಗಣ್ಯರು. ಅವರ ಜೀವನವೇ ಒಂದು ಆದರ್ಶ ಗಾಥೆ. ಶಿವಾಜಿ ಮಹಾರಾಜರು ಶತ್ರುಗಳ ಎದುರು ನಿಂತ ಧೈರ್ಯಶಾಲಿ ಯೋಧರು. ಇವರು 1630ರ ಫೆಬ್ರವರಿ 19ರಂದು ಮಹಾರಾಷ್ಟ್ರದ ಶಿವನೇರಿ ಕೋಟೆಯಲ್ಲಿ ಜನಿಸಿದರು. ಅವರ ತಂದೆ ಶಾಹಾಜಿ ಭೋಸಲೆ ಮತ್ತು ತಾಯಿ ಜಿಜಾಬಾಯಿ. ಬಾಲ್ಯದಿಂದಲೇ ಶಿವಾಜಿ ಕಷ್ಟ, ಸಹನಶೀಲ ಪರಿಸರದಲ್ಲಿ ಬೆಳೆದವರು. ಕೋಟೆಯ ಗಟ್ಟಿಯಾದ ಗೋಡೆಗಳ ನಡುವೆ ಹುಟ್ಟಿದ ಆ ಬಾಲಕನ ಮನಸ್ಸು ಕೂಡ ಅದೇ ರೀತಿ ದೃಢವಾಗಿತ್ತು. ಶಿವಾಜಿಯ ಬಾಲ್ಯ ಕೇವಲ ಬಾಲ್ಯವಲ್ಲ, ಅದು ಒಂದು ಮಹಾನ್ ನಾಯಕರ ರೂಪುಗೊಳ್ಳುವ ಪ್ರಕ್ರಿಯೆ. ತಾಯಿ ಸಂಸ್ಕಾರ, ಗುರುಗಳ ಮಾರ್ಗದರ್ಶನ, ಕಠಿಣ ಪರಿಸರ ಮತ್ತು ದೇಶಭಕ್ತಿಯ ಪ್ರೇರಣೆ – ಇವೆಲ್ಲವು ಸೇರಿ ಶಿವಾಜಿಯನ್ನು ಭವಿಷ್ಯದ ಮಹಾನ್ ರಾಜನನ್ನಾಗಿ ರೂಪಿಸಿತು. ಶಿವಾಜಿಯ ವ್ಯಕ್ತಿತ್ವ ರೂಪುಗೊಳ್ಳಲು ತಾಯಿ ಜಿಜಾಬಾಯಿಯ ಪಾತ್ರ ಅಪಾರ. ಅವರು ರಾಮಾಯಣ, ಮಹಾಭಾರತದ ವೀರಗಾಥೆಗಳನ್ನು ಹೇಳಿ ದೇಶಭಕ್ತಿ ಮತ್ತು ಧರ್ಮನಿಷ್ಠೆಯ ಬೀಜ ಬಿತ್ತಿದವರು. ಜಿಜಾಬಾಯಿ ತಮ್ಮ ಮಗನಲ್ಲಿ “ಸ್ವರಾಜ್ಯ” ಎಂಬ ಕನಸನ್ನು ನೆಟ್ಟು ಬೆಳೆಸಿದರು. ಬಾಲ ಶಿವಾಜಿಯ ಹೃದಯದಲ...