ಕೇಂದ್ರದಿಂದ ಜಿಲ್ಲೆಗೆ ಏಮ್ಸ್ ಮಂಜೂರು ಮಾಡದಿರುವುದು ಖಂಡನೀಯ- ಡಾ.ರಝಾಕ್ ಉಸ್ತಾದ್ 

 ಜಯ ಧ್ವಜ ನ್ಯೂಸ್, ರಾಯಚೂರು,ಆ.2- ಕರ್ನಾಟಕ ರಾಜ್ಯಕ್ಕೆ ಯಾವುದೇ ಏಮ್ಸ್ ಮಂಜೂರು ಮಾಡಿಲ್ಲವೆಂದು ಲೋಕಸಭೆಯಲ್ಲಿ ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವರು ಉತ್ತರ ನೀಡಿರುವದು ಅತ್ಯಂತ ಖಂಡನೀಯವಾಗಿದೆ ಎಂದು ಕೆಪಿಸಿಸಿ ಮಾದ್ಯಮ ವಿಭಾಗ ರಾಜ್ಯ ವಕ್ತಾರರಾದ ಡಾ.ರಝಾಕ ಉಸ್ತಾದ ತಿಳಿಸಿದ್ದಾರೆ. ಲೋಕಸಭೆ ಅಧಿವೇಶನದಲ್ಲಿ ಕೇಂದ್ರ ಸರಕಾರ ರಾಯಚೂರು ಜಿಲ್ಲೆಗೆ ಏಮ್ಸ್ ಸ್ಥಾಪಿಸುವ ಕುರಿತು ಸಂಸದ ಜಿ.ಕುಮಾರ ನಾಯಕ ಮತ್ತು ಈ.ತುಕಾರಾಂ ಅವರು ಕೇಳಿದ ಪ್ರಶ್ನೆಗೆ ಸಚಿವರು ನೀಡಿರುವ ಉತ್ತರ ಬೇಸರ ಮೂಡಿಸಿದ ಎಂದು ತಿಳಿಸಿದ್ದಾರೆ. ಈಗಾಗಲೇ ದೇಶದಲ್ಲಿ 25 ಏಮ್ಸ್ ಮಂಜೂರು ಮಾಡಿ, ಕೆಲವೊಂದು ಕಾರ್ಯನಿರ್ವಹಿಸುತ್ತಿವೆ, ಇಡೀ ದಕ್ಷಿಣ ಭಾರತದಲ್ಲಿ ಆಂದ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಿಗೆ ಮಾತ್ರ ಏಮ್ಸ್ ನೀಡಲಾಗಿದೆ, ಇನ್ನುಳಿದಂತೆ ಎಲ್ಲಾ 22 ಏಮ್ಸ್ ಸಂಸ್ಥೆಗಳನ್ನು ಉತ್ತರ ಭಾರತಕ್ಕೆ ನೀಡಿ ತಾರತಮ್ಯ ಮಾಡಿದ್ದಾರೆ. ಕೇವಲ ಉತ್ತರ ಭಾರತ ಕೇಂದ್ರೀಕರಿಸಿ ಅಭಿವೃದ್ದಿ ಯೋಜನೆಗಳನ್ನು ಜಾರಿಗೊಳಿಸುವದು ಯಾವ ನ್ಯಾಯ ಎಂದು ಕೇಂದ್ರ ಸರಕಾರಕ್ಕೆ ಪ್ರಶ್ನಿಸಬೇಕಾಗುತ್ತದೆ. ಕರ್ನಾಟಕ ರಾಜ್ಯ ದೇಶದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಜ್ಯಗಳಲ್ಲಿ ಒಂದು, ದೇಶದ ಆರ್ಥಿಕತೆಗೆ ಅತೀ ಹೆಚ್ಚು ಕೊಡುಗೆ ನೀಡುತ್ತಿದೆ, ಇಂತಹ ರಾಜ್ಯಕ್ಕೆ ಏಮ್ಸ್ ಮಂಜೂರು ಮಾಡಲು ಕೇಂದ್ರ ಸರಕಾರ ಮೀನಮೇಷ ಎಣಿಸುತ್ತಿರುವದು ಸರಿಯಲ್ಲ. ಕಲ್ಯಾಣ ಕರ್ನಾಟಕದ ಐದು ಲೋಕಸಭಾ ಸದಸ್ಯರು ಈಗಾಗಲೇ ಕೇಂದ್ರಕ್ಕೆ ಪತ್ರ ಬರೆದು ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸಲು ಒತ್ತಾಯಿಸಿರುತ್ತಾರೆ.

ರಾಯಚೂರು ಜಿಲ್ಲೆಗೆ ಈಗಾಗಲೇ ಇದೇ ಬಿಜೆಪಿ ಸರಕಾರ ಐಐಟಿ ನೀಡುವಲ್ಲಿ ಮೋಸ ಮಾಡಿದೆ, ಈಗ ಕಳೆದ ಮೂರು ವರ್ಷಗಳಿಂದ ಏಮ್ಸ್ ಮಂಜೂರು ಮಾಡಲು ಒತ್ತಾಯಿಸಿ ನಿರಂತರ ಹೋರಾಟ ನಡೆಯುತ್ತಿದೆ, ರಾಜ್ಯ ಸರಕಾರವು ಸಹ ಹಲವು ಸಲ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಅವರ ನೇತೃತ್ವದ ನಿಯೋಗ ಕೇಂದ್ರ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದೆ, ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಮೂರು ಸಲ ಪತ್ರ ಬರೆದು ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಕೋರಿದ್ದಾರೆ, ಆದರೂ ಕೇಂದ್ರ ಸರಕಾರ ರಾಯಚೂರಿಗೆ ಏಮ್ಸ್ ಮಂಜೂರು ಮಾಡಲು ಹಿಂದೇಟು ಹಾಕುತ್ತಿರುವದು ಹಿಂದುಳಿದ ಜಿಲ್ಲೆಗಳ ವಿರೋಧಿ ಭಾವನೆ ಎದ್ದು ಕಾಣುತ್ತಿದೆ ಎಂದು ದೂರಿದ್ದಾರೆ. ರಾಯಚೂರು ಜಿಲ್ಲೆ ಕೇಂದ್ರ ಸರಕಾರದ ನೀತಿ ಆಯೋಗ ಪಟ್ಟಿ ಮಾಡಿರುವ ಮಹತ್ಕಾಂಕ್ಷೀ ಜಿಲ್ಲೆಗಳ ಪಟ್ಟಿಯಲ್ಲಿಯೂ ಇದೆ, ಅದಾಗ್ಯೂ ಏಮ್ಸ್ ಮಂಜೂರು ಮಾಡಲು ಕೇಂದ್ರದ ಬಿಜೆಪಿ ಸರಕಾರ ನಿರ್ಣಯ ತೆಗೆದುಕೊಳ್ಳದೇ ಇರುವದು ದುರಂತವಾಗಿದೆ. ರಾಯಚೂರು ಜಿಲ್ಲೆ ಕರ್ನಾಟಕ ರಾಜ್ಯದಲ್ಲಿದ್ದರೂ ಆಂದ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಗಡಿ ಭಾಗಕ್ಕೆ ಹೊಂದಿಕೊoಡಿರುವದರಿoದ ಮೂರು ರಾಜ್ಯಗಳ ಜನರಿಗೆ ಇಲ್ಲಿ ಸ್ಥಾಪಿಸುವ ಏಮ್ಸ್ ಸಂಸ್ಥೆಯಿoದ ಅನುಕೂಲವಾಗುತ್ತದೆ. ಆದ್ದರಿಂದ, ಕೇಂದ್ರ ಸರಕಾರ ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸುವ ಬಗ್ಗೆ ತಕ್ಷಣ ನಿರ್ಣಯ ಕೈಗೊಳ್ಳಬೇಕೆಂದು ಪ್ರಕಟಣೆ ಮೂಲಕ ಆಗ್ರಹ ಮಾಡಿದ್ದಾರೆ.


          

Comments

Popular posts from this blog