ಜಿಲ್ಲಾಡಳಿತದಿಂದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ: ಶ್ರೀ ಮಹರ್ಷಿ ವಾಲ್ಮೀಕಿ ಅವರ ಜೀವನ ಸಂದೇಶ ಸದಾಕಾಲ ಪ್ರಸ್ತುತ- ಸಂಸದ ಜಿ.ಕುಮಾರ್ ನಾಯಕ
ಜಯ ಧ್ವಜ ನ್ಯೂಸ್ ,ರಾಯಚೂರು ಅ. 07 - ಮಹರ್ಷಿ ವಾಲ್ಮೀಕಿ ಅವರು ತಿಳಿಸಿದ ಜೀವನ ಮೌಲ್ಯಗಳನ್ನು
ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಂಸದ ಜಿ.ಕುಮಾರ್ ನಾಯಕ ಅವರು ಹೇಳಿದರು.
ಅವರಿಂದು ನಗರದ ಆಶಾಪೂರು ರಸ್ತೆಯ ವಾಲ್ಮೀಕಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆ ರಾಯಚೂರು, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಇವರಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಾಲ್ಮೀಕಿ ರಾಮಾಯಣ ಗ್ರಂಥವನ್ನು ರಚಿಸಿ ಮಹರ್ಷಿ ವಾಲ್ಮೀಕಿಯವರು ದೇಶ ಮಾತ್ರವಲ್ಲದೆ ಇಡೀ ಜಗತ್ತಿನ ಆದಿ ಕವಿ ಎಂದೇ ಹೆಸರಾಗಿದ್ದಾರೆ ಎಂದರು. ರಾಮಾಯಣದ ಮೂಲಕ ಮನುಕುಲಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಅದರಲ್ಲಿರುವ ಸಂದೇಶಗಳು ಸದಾಕಾಲ ಪ್ರಸ್ತುತವಾಗಿದ್ದು, ಯುವಕರು, ವಾಲ್ಮೀಕಿಯವರು ತಿಳಿಸಿದ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಮಹರ್ಷಿ ವಾಲ್ಮೀಕಿ ಕೇವಲ ಒಂದು ಸಮುದಾಯಕ್ಕೆ ಸೀಮಿತರಾಗಿಲ್ಲ; ಇಡೀ ದೇಶದ, ಜಗತ್ತಿನ ಎಲ್ಲ ಸಮುದಾಯ ಜನತೆ ಮೆಚ್ಚುವ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದರು.
ನಾವು ಇತಿಹಾಸ ಅರಿಯವೇಕು. ಅಂದಾಗ ಮಾತ್ರ ಹೊಸ ಇತಿಹಾಸ ನಿರ್ಮಿಸಲು ಸಾಧ್ಯವಾಗಲಿದೆ ಎಂದ ಸಂಸದರು, ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ರಾಯಚೂರು ನಗರಕ್ಕೆ ಹೆಮ್ಮೆ ಅನಿಸಿದ್ದು, ವಿಶ್ವವಿದ್ಯಾಲಯಕ್ಕೆ ವಾಲ್ಮೀಕಿಯವರ ಹೆಸರನ್ನು ನಾಮಕರಣ ಮಾಡಿದ ರಾಜ್ಯ ಸರ್ಕಾರಕ್ಕೆ ತಾವು ಅಭಿನಂದಿಸುವುದಾಗಿ ಹೇಳಿದರು.
ರಾಯಚೂರಿನ ವಾಲ್ಮೀಕಿ ಭವನದ ಅಭಿವೃದ್ಧಿಗೆ 50 ಲಕ್ಷ ರೂ.ಅನುದಾನವನ್ನು ಸಂಸದರ ನಿಧಿಯಿಂದ ನೀಡುವುದಾಗಿ ಸಂಸದರು ತಿಳಿಸಿದರು.
ಇದೇ ವೇಳೆ, ರಾಯಚೂರು ನಗರ ಕ್ಷೇತ್ರದ ಶಾಸಕರಾದ ಡಾ.ಎಸ್ ಶಿವರಾಜ ಪಾಟೀಲ್ ಅವರು ಮಾತನಾಡಿ, ಮಹರ್ಷಿ ವಾಲ್ಮೀಕಿ ಜಗತ್ತಿನ ಮೊದಲ ಕವಿ. ಸುಮಾರು 12 ಸಾವಿರ ವರ್ಷಗಳ ಹಿಂದೆ ರಾಮಾಯಣ ಬರೆದು ಸಂಬಂಧಗಳ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ. ರಾಯಚೂರು ಭಾಗದಲ್ಲೂ ಪರಿಶಿಷ್ಟ ವರ್ಗದ ಜನರ ಕೊಡುಗೆ ಅಪಾರವಾಗಿದೆ. ವಾಲ್ಮೀಕಿ ಅವರ ತತ್ವಾದರ್ಶಗಳಿಂದ ಸಮಾಜದಲ್ಲಿ ಸಮಾನತೆ ನೆಲೆಸಬೇಕು ಎಂದು ತಿಳಿಸಿದರು.
ವಾಲ್ಮೀಕಿ ಭವನದ ದುರಸ್ತಿಗೆ ಗಮನ ಹರಿಸಬೇಕು ಎಂದು ಇದೆ ವೇಳೆ ಶಾಸಕರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.
ಈ ವೇಳೆ ಉಪನ್ಯಾಸಕರಾಗಿ ಸುರಪುರದ ವಿಶ್ರಾಂತ ಪ್ರಾಂಶುಪಾಲರಾದ ಪ್ರೋ.ಜೆ.ವೇಣುಗೋಪಾಲ ನಾಯಕ ಅವರು ಮಾತನಾಡಿ, ವಾಲ್ಮೀಕಿ ಸಮಾಜವು ರಾಜ್ಯದಲ್ಲಿ ಮೂರನೇ ದೊಡ್ಡ ಸಮಾಜವಾಗಿದೆ. ಸಮಾಜದ ಮುಖಂಡರು ಒಗ್ಗಟ್ಟಾಗಿರಬೇಕು. ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ರಾಜಕೀಯವಾಗಿ ಎಲ್ಲರೂ ಸಂಘಟಿತರಾಗಬೇಕು ಎಂದರು.
ಮಹರ್ಷಿ ವಾಲ್ಮೀಕಿ ಅವರನ್ನು ನಾವೇಲ್ಲರೂ ಸ್ವಾಭಿಮಾನದ ಪ್ರತೀಕವಾಗಿ ಸ್ವೀಕರಿಸಬೇಕು. ವಾಲ್ಮೀಕಿ ಇಡೀ ವಿಶ್ವಕ್ಕೆ ರಾಮಾಯಣ ಮಹಾಕಾವ್ಯ ನೀಡಿ, ಸರ್ವಧರ್ಮಿಯರಿಗೂ ಪೂಜ್ಯರಾಗಿದ್ದಾರೆ. ಮಹರ್ಷಿ ವಾಲ್ಮೀಕಿ ಅವರ ಜೀವನದ ಪಾಠವು ನಮ್ಮ ಬದುಕಿನ ಬದಲಾವಣೆಗೆ ನಾಂದಿ ಆಗಬೇಕು ಎಂದರು.
ಜಿಲ್ಲಾಧಿಕಾರಿಗಳಿಂದ ಸಂವಿಧಾನದ ಪೀಠಿಕೆ ಬೋಧನೆ: ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ನಗರದ ಆಶಾಪೂರು ವಾಲ್ಮೀಕಿ ಭವನದಲ್ಲಿ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಭಾರತ ಸಂವಿಧಾನದ ಪೂರ್ವ ಪೀಠಿಕೆಯನ್ನು ಬೋಧಿಸಿದರು.
ಸಾಧಕರಿಗೆ ಸನ್ಮಾನ: ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಸಮಾಜದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದ ಮುಖಂಡರಿಗೆ ವಿವಿಧ ಗಣ್ಯರಿಂದ ಈ ವೇಳೆ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪುಟ್ಟಮಾದಯ್ಯ ಎಂ., ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಕುಮಾರಸ್ವಾಮಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳಾದ ಶಿವಮಾನಪ್ಪ, ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಚನ್ನಬಸವ ನಾಯಕ, ಸಮಾಜದ ಮುಖಂಡರಾದ ತಾಯಣ್ಣ ನಾಯಕ, ಮಾರಪ್ಪ ಬುದ್ದಿನ್ನಿ, ರಾಜಾ ಪಾಂಡುರಂಗ ನಾಯಕ, ಭೀಮರಾಯ ನಾಯಕ, ವೆಂಕಟೇಶ ನಾಯಕ, ರಘುವೀರ ನಾಯಕ, ನಾರಾಯಣ ನಾಯಕ, ಶಿವಪ್ಪ ನಾಯಕ, ಮಲ್ಲಿಕಾರ್ಜುನ ನಾಯಕ, ವೆಂಕಟೇಶ ಅಸ್ಕಿಹಾಳ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
Comments
Post a Comment