ಕನ್ನಡದಲ್ಲಿ 6ನೇ ವಿಜ್ಞಾನ, ತಂತ್ರಜ್ಞಾನ ಸಮ್ಮೇಳನಕ್ಕೆ ಚಾಲನೆ:

ಕೃಷಿ ಬೆಳವಣಿಗೆಗೆ ವಿಜ್ಞಾನ, ತಂತ್ರಜ್ಞಾನ ಬಳಕೆ ಪೂರಕ- ಬೋಸರಾಜು


ಜಯ ಧ್ವಜ ನ್ಯೂಸ್ ,ರಾಯಚೂರು, ಸೆ. 19- ಇಡೀ ಪ್ರಪಂಚದಲ್ಲೇ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಯೋಗಗಳ ಗತಿ ವೇಗವಾಗಿದೆ ಈ ದಿಶೆಯಲ್ಲಿ ಕೃಷಿ ಬೆಳವಣಿಗೆಗೆ ವಿಜ್ಞಾನ, ತಂತ್ರಜ್ಞಾನ ಬಳಕೆಯು ಪೂರಕವಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ  ಸಭಾ ನಾಯಕರಾದ ಎನ್.ಎಸ್.ಬೋಸರಾಜು ಅವರು ಹೇಳಿದರು.

ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಜಗಜ್ಯೋತಿ ಬಸವೇಶ್ವರ ಪ್ರೇಕ್ಷಾಗೃಹದಲ್ಲಿ ಇಂದು ಬೆಂಗಳೂರಿನ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಇವರ ಸಹಯೋಗದಲ್ಲಿ ನಡೆದ ಕನ್ನಡದಲ್ಲಿ 6ನೇ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಜನರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯಗಳನ್ನು ಸರಿಯಾಗಿ ಮನದಟ್ಟು ಮಾಡಲು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ  ಅಕಾಡೆಮಿಯು ನಾನಾ ಕಾರ್ಯಕ್ರಮ ರೂಪಿಸಿ ಜನಪಯುಕ್ತ ಕೆಲಸ ಮಾಡುತ್ತಿದೆ. ವಿಶೇಷವಾಗಿ ಕನ್ನಡದಲ್ಲಿ 6ನೇ ಸಮ್ಮೇಳನ ಹಮ್ಮಿಕೊಂಡಿದ್ದು ಮಾದರಿಯಾಗಿದೆ ಎಂದರು.


ತುಂಗಭದ್ರಾ ಡ್ಯಾಮನ 92 ಟಿಎಂಸಿ ಪ್ರಮಾಣದ  ಬಹುತೇಕ ನೀರು ರಾಯಚೂರ ಜಿಲ್ಲೆಯಲ್ಲಿ 6 ಲಕ್ಷ ಎಕರೆ ಭೂಮಿಗೆ ಹರಿಯುತ್ತಿದೆ. ಈ ಭಾಗದಲ್ಲಿ ನೀರಾವರಿ ಪ್ರದೇಶ ಇನ್ನಷ್ಟು ವಿಸ್ತರಿಸುವ ಪ್ರಯತ್ನ ಮಾಡಲಾಗುತ್ತಿದೆ. ಇಂತಹ ಪ್ರದೇಶದಲ್ಲಿನ ರೈತರು ತಮ್ಮ ಕೃಷಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಹೊಸ ಹೊಸ ಪ್ರಯೋಗಗಳನ್ನು  ಅಳವಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು. 

ಸಂಸದರಾದ ಜಿ. ಕುಮಾರ ನಾಯಕ ಅವರು ಮಾತನಾಡಿ, ಕೃಷಿ ವಿಜ್ಞಾನವು ಈ ಹೊತ್ತಿನ ಅತ್ಯಂತ ಅಗತ್ಯ ಅಧ್ಯಯನದ ವಿಷಯವಾಗಿದೆ ಎಂದರು.

ಮೆಣಸಿನಕಾಯಿ ಬೆಳೆಗೆ ಕೇಂದ್ರ ಸರ್ಕಾರದಿಂದ ಬೆಂಬಲ ಬೆಲೆ ಲಭ್ಯವಾಗಿದ್ದು ಇಂತಹ ಸಮ್ಮೇಳನದಲ್ಲಿ ನಡೆಯುವ ವಿಚಾರ ಸಂಕಿರಣಗಳಿಂದ ಎಂದು ಅಭಿಪ್ರಾಯಪಟ್ಟರು.

ರೈತನ ಶ್ರಮದ ಬಗ್ಗೆ ಅತ್ಯಂತ ಗೌರವ ಹೊಂದಿದ ರಾಜ್ಯ ಅದು ಕರ್ನಾಟವಾಗಿದೆ. ನೇಗಿಲ ಯೋಗಿ ಎನ್ನುವ ಕವಿ ಕುವೆಂಪು ಅವರ ಹಾಡನ್ನು ಲೋಕಸಭೆಯಲ್ಲಿ ಹೇಳುವ ಸದವಕಾಶ ನನಗೆ ಸಿಕ್ಕಿತ್ತು.  ರೈತನಿಗೆ ನಮ್ಮ ದೇಶದಲ್ಲಿ ಮಹತ್ವದ ಸ್ಥಾನ ಇದೆ. ರೈತ ಶಕ್ತಿಯನ್ನು ಅರಿತು ಅವರ ಬದುಕನ್ನು ಸಶಕ್ತಗೊಳಿಸುವಲ್ಲಿ ರೈತ ವಿಜ್ಞಾನಿಗಳ ಮತ್ತು ಕೃಷಿ ವಿಜ್ಞಾನ ಓದುವ ವಿದ್ಯಾರ್ಥಿಗಳ ಪಾತ್ರ ಅಗತ್ಯವಾಗಿದೆ. ರೈತರಿಗೆ ತಿಳಿಯುವ ಭಾಷೆಯಲ್ಲಿ ಸಮ್ಮೇಳನ ಹಮ್ಮಿಕೊಂಡಿದ್ದು ವಿಶೇಷವಾಗಿದೆ ಎಂದು ತಿಳಿಸಿದರು.

ಕೃಷಿ ವಿಶ್ವವಿದ್ಯಾಲಯದ ಕೀಟಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತು ಸಮ್ಮೇಳನದ ಸಂಯೋಜಕರು ಹಾಗೂ ಪ್ರಾಧ್ಯಾಪಕರಾದ ಡಾ.ಎ.ಜಿ.ಶ್ರೀನಿವಾಸ ಅವರು ಪ್ರಾಸ್ತಾವಿಕ ಮಾತನಾಡಿ, ಜನರಲ್ಲಿ ವಿಜ್ಞಾನದ ಬಗ್ಗೆ ಕಾಳಜಿ ಮೂಡಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಕಳೆದ 20 ವರ್ಷಗಳಿಂದ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಅಕಾಡೆಮಿಯು ರಾಯಚೂರವರೆಗೆ ಕಾರ್ಯಕ್ರಮ ವಿಸ್ತರಿಸಿದ್ದು, ಶ್ಲಾಘನೀಯ ಎಂದರು.

ಸ್ಮರಣ ಸಂಚಿಕೆ ಬಿಡುಗಡೆ:

ಸಂಸದರಾದ ಜಿ. ಕುಮಾರ ನಾಯಕ ಅವರು ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಿದರು.

ಸಮಾರಂಭದಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಅಧ್ಯಕ್ಷರಾದ ಪ್ರೊ.ರಾಜಾಸಾಬ್ ಎ.ಎಚ್., ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಡಿ. ಮಲ್ಲಿಕಾರ್ಜುನ, ತಿಮ್ಮಣ್ಣ ಸೋಮಪ್ಪ ಚಾವಡಿ, ಕುಲಸಚಿವರು ಹಾಗೂ ವ್ಯವಸ್ಥಾಪನಾ ಮಂಡಳಿ ಸದಸ್ಯ ಕಾರ್ಯದರ್ಶಿಗಳಾದ ಶರಣಬಸಪ್ಪ ಕೋಟೆಪ್ಪಗೋಳ, ಡೀನ್ ಡಾ.ಕೆ.ನಾರಾಯಣರಾವ್, ವಿಶ್ರಾಂತ ಕುಲಪತಿಗಳಾದ ಡಾ.ಎಂ.ಕೆ.ನಾಯಕ, ಖ್ಯಾತ ಲೇಖಕಿ, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ,  ಪ್ರಾಧ್ಯಾಪಕರಾದ ಮಲ್ಲಿಕಾರ್ಜುನ ಅಯ್ಯನಗೌಡರ, ಡಾ.ಶರಣಗೌಡ ಸೇರಿದಂತೆ ಇತರರು ಇದ್ದರು.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಸಿಇಓ ಡಾ.ಆನಂದ ಆರ್ ಸ್ವಾಗತಿಸಿದರು. 

ಬೆಳೆ ಶರೀರ ಕ್ರಿಯಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಸುಮಾ ಟಿ ಸಿ ನಿರೂಪಿಸಿದರು‌. ಕುಮಾರಿ ಸಾಕ್ಷರತಾ ಅವರು ಪ್ರಾರ್ಥಿಸಿದರು.

Comments

Popular posts from this blog