ನಗರದಲ್ಲಿ ತಾಪಮಾನ ಏರಿಕೆ: ಸಾರ್ವಜನಿಕರ ರಕ್ಷಣೆಗಾಗಿ ಶಾಶ್ವತ ನೆರಳು ಹಾಗೂ ನೀರಿನ ವ್ಯವಸ್ಥೆಗೆ ಪ್ರಗತಿಪರ ಸಂಘಟನೆಗಳ ಒತ್ತಾಯ

 ಜಯ ಧ್ವಜ ನ್ಯೂಸ್ , ರಾಯಚೂರು,ಏ.23- ನಗರದಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ತಾಪಮಾನದಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿರುವ ಹಿನ್ನಲೆಯಲ್ಲಿ, ಇಂದು ವಿವಿಧ ಪ್ರಗತಿಪರ ಸಂಘಟನೆಗಳು ಒಗ್ಗೂಡಿ ಮಾನವೀಯ ದೃಷ್ಟಿಕೋನದಿಂದ  ಸಂಘಟನೆಗಳ ಪ್ರತಿನಿಧಿಗಳು ನಗರದ ಪ್ರಮುಖ ವೃತ್ತಗಳಾದ ಬಸವೇಶ್ವರ ವೃತ್ತ ಹಾಗೂ ಗಂಜ್ ವೃತ್ತಗಳಿಗೆ ಭೇಟಿ ನೀಡಿ, ಟ್ರಾಫಿಕ್ ಸಿಗ್ನಲ್‌ಗಳಲ್ಲಿ ನಿಲ್ಲುವ ವಾಹನ ಸವಾರರಿಗೆ ಶಾಶ್ವತ ನೆರಳು ಒದಗಿಸುವ ಉದ್ದೇಶದಿಂದ ಪರದೆ (ಶೇಡ್) ವ್ಯವಸ್ಥೆಯನ್ನು ಪರಿಶೀಲಿಸಿ, ಸೂಕ್ತ ಸಲಹೆಗಳನ್ನು ನೀಡಿದರು. ಹೆಚ್ಚುತ್ತಿರುವ ಬಿಸಿಲಿನ ತಾಪಮಾನದಲ್ಲಿ ಸಿಗ್ನಲ್‌ಗಳಲ್ಲಿ ನಿಂತುಕೊಳ್ಳುವ ನಾಗರಿಕರಿಗೆ ನೆರಳು ಸೌಲಭ್ಯ ಅತ್ಯಂತ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.


ಇದಾದ ನಂತರ ಮಹಾನಗರ ಪಾಲಿಕೆ ಆಯುಕ್ತರನ್ನು ಭೇಟಿ ಮಾಡಿದ ಪ್ರತಿನಿಧಿ ಮಂಡಳಿ, ಈ ಕಾಮಗಾರಿಯನ್ನು ಆದ್ಯತೆಯಿಂದ ಕೈಗೊಂಡು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಮನವಿ ಸಲ್ಲಿಸಿತು. ಜೊತೆಗೆ, ನಗರದಲ್ಲಿನ ಜನನಿಭೀಡ ಪ್ರದೇಶಗಳಲ್ಲಿ ನೀರಿನ ಅರವಟ್ಟಿಗೆ (ಕುಡಿಯುವ ನೀರಿನ ತಾತ್ಕಾಲಿಕ ಕೇಂದ್ರಗಳು) ವ್ಯವಸ್ಥೆ ಮಾಡಬೇಕು ಹಾಗೂ ಪ್ರಮುಖ ರಸ್ತೆಗಳ ಮೇಲೆ ನೀರಿನ ಟ್ಯಾಂಕರ್ ಅಥವಾ ಅಗ್ನಿಶಾಮಕ ವಾಹನಗಳ ಮೂಲಕ ನಿಯಮಿತವಾಗಿ ನೀರು ಸಿಂಪಡಿಸುವ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ವಿನಂತಿಸಲಾಯಿತು.


ಇದೇ ವೇಳೆ ಸಂಘಟನೆಗಳು ಗಂಭೀರ ಎಚ್ಚರಿಕೆಯನ್ನು ನೀಡಿದ್ದು, ಈ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲು ಮಹಾನಗರ ಪಾಲಿಕೆಗೆ ನಾಲ್ಕು ದಿನಗಳ ಅವಧಿಯನ್ನು ನೀಡಲಾಗಿದೆ. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳ್ಳದಿದ್ದಲ್ಲಿ, ಬಸವೇಶ್ವರ ವೃತ್ತದಲ್ಲಿ ರಸ್ತೆ ರೋಕು ಹೋರಾಟವನ್ನು ನಡೆಸಲಾಗುವುದು ಎಂದು ಕಠಿಣವಾಗಿ ಆಗ್ರಹಿಸಲಾಯಿತು.

ಸಂಘಟನೆಗಳು ಸ್ಪಷ್ಟಪಡಿಸಿದಂತೆ, ಇಂತಹ ಕ್ರಮಗಳು ತೀವ್ರ ಬಿಸಿಲಿನ ಸಮಯದಲ್ಲಿ ಸಾರ್ವಜನಿಕರ ಆರೋಗ್ಯವನ್ನು ಕಾಪಾಡಲು ಹಾಗೂ ಉಷ್ಣತೆಯಿಂದ ಉಂಟಾಗುವ ಸಮಸ್ಯೆಗಳನ್ನು ಕಡಿಮೆ ಮಾಡಲು ಬಹಳ ಉಪಕಾರಿಯಾಗಲಿವೆ.

ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇನೆಯ ಜಿಲ್ಲಾಧ್ಯಕ್ಷರಾದ ವಿಶ್ವನಾಥ್ ಪಟ್ಟಿ, ಸಮಾಜಸೇವಕರಾದ ಅಂಬಾಜಿ ಮೈದರ್ಕರ್, ರಾಜೇಶ್ ಕ್ರಾಂತಿ, ಕುಮಾರಸ್ವಾಮಿ, ಅಮರಯ್ಯಸ್ವಾಮಿ, ಬಂದೆ ನವಾಜ್, ನರಸಿಂಹಲು ಮೇಘ, ಗಂಗಾಧರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Comments

Popular posts from this blog