ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು 16 ನಗರ ಸಾರಿಗೆ ಹೊಸ ಬಸ್ಗಳಿಗೆ ಚಾಲನೆ- ಶಾಸಕ ಡಾ.ಶಿವರಾಜ ಪಾಟೀಲ್
ಜಯ ಧ್ವಜ ನ್ಯೂಸ್ ರಾಯಚೂರು ಡಿ.26- ನಗರದ ವಿವಿಧೆಡೆ ನಿತ್ಯ ತೆರಳುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ 16 ನಗರ ಹೊಸ ಬಸ್ಗಳಿಗೆ ಚಾಲನೆ ನೀಡಲಾಗುತ್ತಿದ್ದು, ಇದರಿಂದ ಸಾರ್ವಜನಿಕರು, ಮಹಿಳೆಯರು ಹಾಗೂ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ರಾಯಚೂರು ನಗರ ಕ್ಷೇತ್ರದ ಶಾಸಕರಾದ ಡಾ. ಶಿವರಾಜ ಎಸ್. ಪಾಟೀಲ್ ಅವರು ಹೇಳಿದರು.
ಅವರಿಂದು ನಗರದ ಕೆ.ಕೆ.ಆರ್.ಟಿ.ಸಿ ಮೂರನೇ ಘಟಕದಲ್ಲಿ ಹಮ್ಮಿಕೊಳ್ಳಲಾಗಿದ್ದ ನೂತನ 16 ನಗರ ಸಾರಿಗೆ ಬಸ್ಸುಗಳಿಗೆ ಪೂಜಾ ಕಾರ್ಯಕ್ರಮಕ್ಕೆ ನೆರವೇರಿಸಿ ಮಾತನಾಡಿದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ನಗರ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಗೊಳಿಸಲು ಟಾಟಾ ಮೋಟಾರ್ಸ ತಯಾರಿಕೆಯ ಹೊಸ ನಗರ ಸಾರಿಗೆ ಬಸ್ಸುಗಳನ್ನು ಸೇರ್ಪಡೆಗೊಳಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ.
ಈ ಬಸ್ಗಳಿಗೆ 187 ಎಚ್.ಪಿ. ಸಾಮರ್ಥ್ಯದ ಬಿಎಸ್-6 ಎಂಜಿನ್ಗಳನ್ನು ಅಳವಡಿಸಲಾಗಿದ್ದು, ಈ ಬಸ್ಗಳನ್ನು ಆಟೋಮೋಟಿವ್ ಇಂಡಸ್ಟ್ರಿ ಸ್ಟ್ಯಾಂಡರ್ಡ್- ಎಐಎಸ್-052 ಬಸ್ ಕೋಡ್ ನಂತೆ ನಿರ್ಮಿಸಲಾಗಿದೆ. ಈ ಬಸ್ ಗಳು 40 ಪ್ರಯಾಣಿಕ ಆಸನಗಳನ್ನು ಹೊಂದಿದ್ದು, ಎಲ್ಇಡಿ ಟ್ಯೂಬ್ ಲೈಟ್ ಅಳವಡಿಸುವುದರೊಂದಿಗೆ ಒಳಾಂಗಣವನ್ನು ಉತ್ತಮವಾಗಿ ವಿನ್ಯಾಸಗೊಳಿಸಲಾಗಿದೆ ಎಂದರು.
ಈ ಬಸ್ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸುರಕ್ಷತೆಗಾಗಿ ಒಟ್ಟು ನಾಲ್ಕು ಸಿ.ಸಿ. ಕ್ಯಾಮೆರಾಗಳನ್ನು ಆಳವಡಿಸಲಾಗಿದೆ. ಜೊತೆಗೆ ಆಧುನಿಕ ತಂತ್ರಜ್ಞಾನ ಹೊಂದಿರುವ ಸ್ವಯಂ ಚಾಲಿತ ಅಗ್ನಿ ನಂದಕ ಉಪಕರಣಗಳನ್ನು, ರೀವರ್ಸ್ ಪಾಕಿಂಗ್ ಅಲರಾಮ್ ವ್ಯವಸ್ಥೆ ಹಾಗೂ ಲೋಕೆಶನ್ ಟ್ರಾಕಿಂಗ್, ಪ್ಯಾನಿಕ್ ಬಟನಗಳನ್ನು ಅಳವಡಿಸಲಾಗಿದೆ. ಬಸ್ ಗಳನ್ನು ಸರಿಯಾಗಿ ಉಪಯೋಗಿಸಬೇಕೆಂದು ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೆ ವೇಳೆ ನೂತನ ಬಸ್ಗಳಲ್ಲಿ ಶಾಸಕರು ಸಂಚರಿಸಿ ಬಸ್ ಗಳ ಗುಣಮಟ್ಟ ಪರೀಕ್ಷಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ರವಿ ಜಲ್ದಾರ್, ರಾಯಚೂರು ವಿಭಾಗದ ಸಂಚಾರಿ ಅಧಿಕಾರಿ ಚಂದ್ರಶೇಖರ ಕೆ.ಎಲ್., ವಿಭಾಗದ ತಾಂತ್ರಿಕ ಅಭಿಯಂತರರಾದ ನಾಗರಾಜ್ ವಾರಾದ್, ಆಡಳಿತಾಧಿಕಾರಿ ದೇವರಾಜ್, ಡಿಪೋ ವ್ಯವಸ್ಥಾಪಕ ನಾಣೇಗೌಡ, ಭದ್ರತಾ ಮತ್ತು ಜಾಗೃತಿ ಅಧಿಕಾರಿ ಶ್ರೀನಿವಾಸ ಸೇರಿದಂತೆ ವಿವಿಧ ವಿಭಾಗದ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಮುಖಂಡರು ಇದ್ದರು.



Comments
Post a Comment