ಪೊಲೀಸರ ವಿರುದ್ಧ ಪತ್ರಕರ್ತರ ತಂಡಕ್ಕೆ  ಒಂಭತ್ತು ವಿಕೆಟ್‌ಗಳ ಭರ್ಜರಿ ಗೆಲುವು:

ಪೊಲೀಸ್ ಪರೇಡ್ ಮೈದಾನದಲ್ಲಿ ಸೌಹಾರ್ದ ಕ್ರಿಕೆಟ್ ಪಂದ್ಯ


ಜಯ ಧ್ವಜ ನ್ಯೂಸ್, ರಾಯಚೂರು,ಮೇ.17- ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಪೊಲೀಸರು ಮತ್ತು ಪತ್ರಕರ್ತರ ನಡುವೆ ಇಂದು ನಡೆದ ಸೌಹಾರ್ದ ಕ್ರಿಕೆಟ್ ಪಂದ್ಯದಲ್ಲಿ ಪತ್ರಕರ್ತರ ತಂಡ ಒಂಭತ್ತು ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.

  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಕ್ಷುಗಿರಿ ಬ್ಯಾಟಿಂಗ್ ಮಾಡುವ ಮೂಲಕ ಕ್ರಿಕೆಟ್ ಪಂದ್ಯಕ್ಕೆ ಚಾಲನೆ ನೀಡಿದರು. ಟಾಸ್ ಗೆದ್ದ ಪತ್ರಕರ್ತರ ತಂಡದ ನಾಯಕ ಸಿದ್ಧಯ್ಯ ಸ್ವಾಮಿ  ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. . ಮೊದಲು ಬ್ಯಾಟಿಂಗ್ ಮಾಡಿದ ಪೊಲೀಸರ ತಂಡ 10 ಓವರ್‌ಗಳಲ್ಲಿ 69 ರನ್ ಗಳಿಸಿತು. ಪತ್ರಕರ್ತರ ತಂಡದ ಆಕ್ರಮಣಕಾರಿ ಬೌಲಿಂಗ್ ದಾಳಿಗೆ ಪೊಲೀಸ್ ತಂಡದ ಆಟಗಾರರು ಹೆಚ್ಚು ಕಾಲ ಕ್ರೀಸ್‌ನಲ್ಲಿ ಉಳಿಯಲಿಲ್ಲಿ. ಅಣ್ಣಪ್ಪ ಮೇಟಿಗೌಡ, ಲಕ್ಷ್ಮಣ, ಶ್ರೀಕಾಂತ, ಭೀಮೇಶ ಉತ್ತಮ ಬೌಲಿಂಗ್ ಪ್ರದರ್ಶನ ಮಾಡಿದರು. ಉತ್ತಮ ಕ್ಷೇತ್ರ ರಕ್ಷಣೆ ಕಾಪಾಡಿಕೊಂಡ ಪತ್ರಕರ್ತರ ತಂಡ ಪೊಲೀಸ್ ತಂಡ ಹೆಚ್ಚು ರನ್ ಸೇರಿಸದಂತೆ ಕಡಿವಾಣ ಹಾಕಿತು. ಎಸ್‌ಪಿ ಅರುಣಾಂಕ್ಷುಗಿರಿರವರು ಮಾತ್ರ 19 ರನ್ ಗಳಿಸಿ ನಾಟ್ ಔಟ್ ಆಗಿ ಉಳಿಯುವ ಮೂಲಕ ತಂಡ ಹೆಚ್ಚಿನ ಮೊತ್ತ ಸೇರಿಸಲು ನೆರವಾದರು.

  ನಂತರ ಬ್ಯಾಟಿಂಗ್ ಆರಂಭಿಸಿದ ಪತ್ರಕರ್ತರ ತಂಡ ಕೇವಲ 6 ಓವರ್‌ಗಳಲ್ಲಿ ನಿಗದಿತ ಗುರಿ ತಲುಪುವ ಮೂಲಕ ಸುಲಭವಾಗಿ ಗೆಲುವು ದಾಖಲಿಸಿತು. ಪತ್ರಕರ್ತರನ್ನು ಹಿಡಿದಿಡುವಲ್ಲಿ ಪೊಲೀಸ್ ತಂಡದ ಬೌಲರ್‌ಗಳು ವಿಫಲರಾದರು. ಕೇವಲ ಒಂದು ವಿಕೆಟ್ ನಷ್ಟಕ್ಕೆ 70 ರನ್ ದಾಖಲಿಸಿ ಗೆಲುವು ತನ್ನದಾಗಿಸಿಕೊಂಡಿತು. ಪತ್ರಕರ್ತರ ತಂಡದ ಪರವಾಗಿ ಭೀಮೇಶ ಪೂಜಾರ್, ಶ್ರೀಕಾಂತ್ ಸಾವೂರು ಹಾಗೂ ಮಲ್ಲನಗೌಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಹರೀಶ, ಕುಮಾರಸ್ವಾಮಿ, ಡಿಎಸ್ಪಿ  ಶಾಂತವೀರ, ಪರಮಾನಂದ ಗೋಡ್ಕೆ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ, ರಿಪೋಟರ‍್ಸ್ ಗಿಲ್ಡ್ ಅಧ್ಯಕ್ಷ ವಿಜಯಕುಮಾರ್ ಜಾಗಟಗಲ್, ಹಿರಿಯ ಪತ್ರಕರ್ತರಾದ ಶಿವಮೂರ್ತಿ ಹಿರೇಮಠ, ಮಲ್ಲಿಕಾರ್ಜುನಯ್ಯ, ಸುರೇಶ ರೆಡ್ಡಿ, ಮಂಜುನಾಥ ಸಾಲಿ, ವಾಗೀಶ ಪಾಟೀಲ್, ಗೌಡಪ್ಪ ಗೌಡ, ಮಹಾನಂದ ನಾಯಕ, ಜಗನ್ನಾಥ ಪೂಜಾರ್ ಸೇರಿದಂತೆ ನಗರದ ಪತ್ರಕರ್ತರು.   ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಕ್ರೀಡಾಕೂಟದಲ್ಲಿ  ಪಾಲ್ಗೊಂಡಿದ್ದರು.



Comments

Popular posts from this blog