ಬೆಂಗಳೂರು-ಮುಂಬೈ ಸ್ಲೀಪರ್ ವಂದೇಭಾರತ ರೈಲು ಸಂಚಾರ ಖಚಿತಪಡಿಸಿದ ರೈಲ್ವೆ ಇಲಾಖೆ- ಡಾ.ಬಾಬುರಾವ್
ಜಯ ಧ್ವಜ ನ್ಯೂಸ್ ,ರಾಯಚೂರು, ಮೇ.23- ಬೆಂಗಳೂರು- ಮುಂಬೈ ಮಧ್ಯ ಹೊಸ ಸ್ಲೀಪರ್ ವಂದೇ ಭಾರತ ರೈಲು ಸಂಚರಿಸುವುದನ್ನು ರೈಲ್ವೆ ಇಲಾಖೆ ಖಚಿತ ಪಡಿಸಿದೆ ಎಂದು ರೈಲ್ವೆ ಸಲಹಾ ಸಮಿತಿ ಮಾಜಿ ಸದಸ್ಯ ಡಾ. ಬಾಬುರಾವ್ ಅವರು ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು ಈ ರೈಲು ಬೆಂಗಳೂರಿನಿಂದ ಹೊರಟು, ಗುಂತಕಲ್, ರಾಯಚೂರು, ಕಲಬುರಗಿ, ಸೊಲ್ಲಾಪೂರ ಮಾರ್ಗವಾಗಿ ಸಂಚರಿಸಲಿದೆ. ಟಿಕೆಟ್ ದರ ಮೂರನೇ ದರ್ಜೆ ಏಸಿಗೆ ಪ್ರತಿ ಕಿ.ಮೀಗೆ ಜಿಎಸ್ ಟಿ ಸೇರಿ ರೂ . ದ್ವಿತೀಯ ದರ್ಜೆ ಏಸಿಗೆ 3.10 ರೂ. ಪ್ರಥಮ ದರ್ಜೆ ಏಸಿಗೆ 3.80 ರೂ. ನಿಗದಿಪಡಿಸಲಾಗಿದೆ. ರೈಲು ಸಂಚಾರದ ದಿನಾಂಕವನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಉದ್ಯಾನ ಎಕ್ಸ್ ಪ್ರೆಸ್ ಬಿಟ್ಟರೆ ಬೆಂಗಳೂರಿನಿಂದ ಮುಂಬೈಗೆ ಸಂಚರಿಸಲು 30 ವರ್ಷಗಳಿಂದ ಬೇರೆ ಯಾವುದೇ ರೈಲುಗಳ ಸೌಲಭ್ಯ ಇರಲಿಲ್ಲ. ಈಗ ಬೆಂಗಳೂರು-ಮುಂಬೈ ನ್ಯೂ ಸ್ಲೀಪರ್ ವಂದೇಭಾರತ ರೈಲು ಸಂಚಾರದಿಂದಾಗಿ ಮತ್ತೊಂದು ರೈಲಿನ ಸೌಲಭ್ಯ ದೊರೆದಂತಾಗಿದೆ. ಈ ರೈಲು ಉದ್ಯಾನ ಗಿಂತ 9 ಕ್ಕಿಂತ ಹೆಚ್ಚು ತಾಸು ಉಳಿತಾಯ ಮಾಡಲಿದೆ. ಜೊತೆಗೆ ಈ ಭಾಗದ 30 ವರ್ಷದ ಕನಸು ನನಸಾದಂತಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಅವರಿಗೆ ಈ ರೈಲು ಸೌಲಭ್ಯವನ್ನು ಈ ಭಾಗಕ್ಕೆ ಒದಗಿಸಬೇಕೆಂದು ನಿರಂತರವಾಗಿ ಮನವಿ ಮಾಡುತ್ತ ಬರಲಾಗಿತ್ತು. ಈಗ ನಮ್ಮ ಮನವಿಗೆ ಸ್ಪಂದನೆ ಸಿಕ್ಕಿದ್ದು ಉಭಯ ಸಚಿವರು ಅಭಿನಂದನಾರ್ಹರು ಎಂದು ಹೇಳಿದ್ದಾರೆ.

Comments
Post a Comment