ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ವಿಶ್ವ ಪರಿಸರ ದಿನಾಚರಣೆ: ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ - ನ್ಯಾ. ಮಾಲಾ ಎನ್. ಡಿ

ಜಯ ಧ್ವಜ ನ್ಯೂಸ್ ,ರಾಯಚೂರು ಜೂ,5- ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಮರ ಗಿಡಗಳನ್ನು ಕಡಿಯುವ ಮೂಲಕ  ನಮ್ಮ ಉತ್ತಮ ಪರಿಸರ ಹಾಳು ಮಾಡುತ್ತಿದ್ದು, ನಾವೆಲ್ಲರೂ ಎಚ್ಚೆತ್ತುಕೊಳ್ಳದಿದ್ದರೆ ಈಗಾಗಲೇ ಅಲ್ಲಲ್ಲಿ ಸಂಭವಿಸುತ್ತಿರವ ಪ್ರಕೃತಿಯ ವಿಕೋಪದ ಜತೆಗೆ ಮತ್ತಷ್ಟು ಘೋರ ವಿಕೋಪಗಳನ್ನು ನಾವು ಎದುರಿಸಬೇಕಾಗುತ್ತದೆ ಎಂದು ರಾಯಚೂರಿನ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಗೌರವಾನ್ವಿತ  ಮಾಲಾ ಎನ್.ಡಿ. ಅವರು ಹೇಳಿದರು.ಅವರಿಂದು ನಗರದ ನೂತನ ನ್ಯಾಯಾಲಯ ಕಟ್ಟಡದ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯಾಂಗ ಇಲಾಖೆ, ಜಿಲ್ಲಾಡಳಿತ, ಅರಣ್ಯ ಇಲಾಖೆ ಹಾಗೂ ಜಿಲ್ಲಾ ವಕೀಲರ ಸಂಘ ರಾಯಚೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ  ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ  ಮಾತನಾಡಿದರು.


ಮುಂದಿನ ಪೀಳಿಗೆಗೆ ಒಳ್ಳೆಯ ಬದುಕು ನೀಡುವ ನಿಟ್ಟಿನಲ್ಲಿ ಉತ್ತಮ ಪರಿಸರವನ್ನು ನೀಡುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಗಿಡಗಳನ್ನು ನೆಟ್ಟಾಕ್ಷಣ ನಮ್ಮ ಜವಾಬ್ದಾರಿ ಮುಗಿಯುವುದಿಲ್ಲ. ಅದನ್ನು ಒಂದು ಹಂತದವರೆಗೆ ಅವುಗಳ ಪೋಷಣೆ ಮಾಡಿ ಜನ, ಜಾನುವಾರುಗಳಿಗೆ ಬಲಿಯಾಗದಂತೆ ಕಾಪಾಡ ಬೇಕಿದೆ ಎಂದರು.

ಪ್ರಕೃತಿಯಿಂದ ಪ್ರೇರಿತವಾಗಿದೆ. ಹವಾಮಾನಕ್ಕಾಗಿ. ನಮ್ಮ ಭವಿಷ್ಯಕ್ಕಾಗಿ ಎಂಬುದು 2026ರ ವಿಶ್ವ ಪರಿಸರ ದಿನದ ಅಧಿಕೃತ ಘೋಷವಾಕ್ಯ ಆಗಿದ್ದು, ಕಲ್ಯಾಣ ಕರ್ನಾಟಕದ ಭಾಗದಲ್ಲಿ ಪರಿಸರ ಪ್ರಮಾಣ ಕಡಿಮೆ ಇದೆ. ಮಳೆಗಾಲದಲ್ಲಿ ಸಸಿಗಳನ್ನು ನೆಟ್ಟರೆ ಮುಂದಿನ ದಿನಗಳಲ್ಲಿ ವಾತಾವರಣದಲ್ಲಿ ಬದಲಾವಣೆಗೆ ಸಹಕಾರಿಯಾಗುತ್ತದೆ ಎಂದರು.

ಈ ವೇಳೆ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಗೌರವಾನ್ವಿತ ಸಿದ್ದರಾಮಪ್ಪ ಕಲ್ಯಾಣರಾವ್ ಅವರು ‌ಮಾತನಾಡಿ, ರಾಯಚೂರಿನಲ್ಲಿ ವರ್ಷದಿಂದ ವರ್ಷಕ್ಕೆ ತಾಪಮಾನವು ಹೆಚ್ಚಳವಾಗುತ್ತಿದ್ದು, ಅದನ್ನು ನಿಯಂತ್ರಣ ಮಾಡಲು ಗಿಡಮರಗಳಿಂದ ಸಾಧ್ಯ. ರಾಜ್ಯ ಕಾನೂನು ಪ್ರಾಧಿಕಾರದ ಆದೇಶದಂತೆ 5 ಕೋಟಿ ಸಸಿಗಳನ್ನು ಹಾಕಲಾಗುತ್ತದೆ. 2 ಕೋಟಿ ಸಸಿಗಳು ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಹಾಗೂ 3 ಕೋಟಿ ಸಸಿಗಳನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಾಕಲಾಗುತ್ತದೆ. ಶಾಲಾ ಹಾಗೂ ಕಾಲೇಜು ಸೇರಿದಂತೆ ಸ್ಥಳವಕಾಶ ಇರುವ ಕಡೆಗಳಲ್ಲಿ ಸಸಿಗಳನ್ನು ಹಾಕಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ, ರಾಯಚೂರಿನ ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ ಬಾಬು, ಕುಟುಂಬ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಗೌರವಾನ್ವಿತ ಶ್ರೀಕಾಂತ್.ಎಸ್.ವಿ., ಸಿ.ಜೆ.ಎಂ. ನ್ಯಾಯಾಲಯದ ಪ್ರಧಾನ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರಾದ ಗೌರವಾನ್ವಿತ ಶ್ರೀಮತಿ ಬಿ.ಟಿ. ಅನ್ನಪೂರ್ಣೇಶ್ವರಿ, ಜೆ.ಎಂ.ಎಫ್.ಸಿ ನ್ಯಾಯಾಲಯದ 1ನೇ ಹೆಚ್ಚುವರಿ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರಾದ ಗೌರವಾನ್ವಿತ ಶ್ರೀ.ಶಂಕರಪ್ಪ ಮಾಲಶೆಟ್ಟಿ, ಜೆ.ಎಂ.ಎಫ್.ಸಿ ನ್ಯಾಯಾಲಯದ 2ನೇ ಹೆಚ್ಚುವರಿ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರಾದ ಗೌರವಾನ್ವಿತ ಸಾಗರ್ ಗುರುಗೌಡ ಪಾಟೀಲ್, ಜೆ.ಎಂ.ಎಫ್.ಸಿ. 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಗೌರವಾನ್ವಿತ ಶ್ರೀ.ಚನ್ನಬಸಪ್ಪ ಆರ್. ಕೂಡಿ, ವಲಯ ಅರಣ್ಯ ಅಧಿಕಾರಿ ರಾಜೇಶ ನಾಯಕ  ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಇದ್ದರು.

Comments

Popular posts from this blog