ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ:       ಗುರಿ ಸಾಧಿಸಲು ನಿರಂತರ ಪ್ರಯತ್ನ‌ ಇರಲಿ-  ಡಾ.ನಾಗಲಕ್ಷ್ಮೀ ಚೌಧರಿ

ಜಯ ಧ್ವಜ ನ್ಯೂಸ್ ,ರಾಯಚೂರು, ಜು. 10- ಉತ್ತಮ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳು ಗುರಿಯನ್ನು ಇಟ್ಟಕೊಳ್ಳಬೇಕು. ಆ ಗುರಿ ಸಾಧಿಸಲು ನಿರಂತರ ಪ್ರಯತ್ನ ಮಾಡಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ ಅವರು ಹೇಳಿದರು.

ಅವರಿಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಂಗಳೂರಿನ ಮಹಿಳಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ‌ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕಾಲೇಜ್ ಶಿಕ್ಷಣ ಇಲಾಖೆ ರಾಯಚೂರು ಇವರ ಸಂಯೋಗದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯೊಂದಿಗೆ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.


ವಿದ್ಯಾರ್ಥಿಗಳು ಕಷ್ಟಪಟ್ಟು ಓದಬೇಕು. ಎಷ್ಟೇ ಅಡ್ಡಿ ಆತಂಕ ಎದುರಾದರೂ ಕಲಿಯೋದು ಬಿಡಬಾರದು. ದಿನನಿತ್ಯದ ಪ್ರಚಲಿತದ ಘಟನೆಗಳನ್ನು ಗಮನಿಸಬೇಕು. ವಿದ್ಯಾರ್ಥಿಗಳು ಪ್ರತಿದಿನವೂ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಜ್ಞಾನವನ್ನು ಪಡೆದವರು ಜಗತ್ತನ್ನು ಆಳ್ವಿಕೆ ಮಾಡಬಹುದು. ಸ್ತ್ರೀ‌ ಶೋಷಣೆ ವಿರುದ್ಧ ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣನವರು ಹೋರಾಟ ಮಾಡಿದ್ದಾರೆ. ಅವರನ್ನು ಪ್ರೇರಣೆಯಾಗಿ ಪಡೆಯಬೇಕು. 

ಒಳ್ಳೆಯ ಸ್ನೇಹಿತರ ಗುಂಪು ಮಾಡಬೇಕು. ಸಮಾಜದ ಆದರ್ಶ ವ್ಯಕ್ತಿಯಾಗಿ ಬಾಳಬೇಕು. ಮೊಬೈಲ್ ಬಳಕೆಯನ್ನು ಸರಿಯಾಗಿ ಮಾಡಿಕೊಳ್ಳಬೇಕು. ಸಮಾಜದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಅದಕ್ಕಾಗಿ ಹೆಣ್ಣುಮಕ್ಕಳು ಜಾಗೃತಿ ವಹಿಸಬೇಕು. ಸಮಯವನ್ನು ಸರಿಯಾಗಿ ಸದ್ಬಳಿಕೆ ಮಾಡಿಕೊಳ್ಳಬೇಕು.  ಹೆಣ್ಣುಮಕ್ಕಳ ಮೇಲೆ ಯಾರೇ ಬ್ಲಾಕ್‌ಮೇಲ್ ಮಾಡಬಾರದು. ಒಂದುವೇಳೆ ಮಾಡಿದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಬೇಕು. ಮಹಿಳೆಯರಿಗಾಗಿ ಮಹಿಳಾ ಪೊಲೀಸ್ ಠಾಣೆ ಇದೆ. ಅದನ್ನು ಉಪಯೋಗಿಸಬೇಕು ಎಂದರು.


ವಿದ್ಯಾರ್ಥಿನಿಯರು ಧೈರ್ಯದಿಂದ ಇರಬೇಕು. ಧೈರ್ಯದಿಂದ ಮಾತನಾಡಿದಾಗ ಮಾತ್ರ ಯಾವುದೇ ಸಮಸ್ಯೆಯನ್ನು, ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ತಪ್ಪುಗಳಾದಾಗ ಪಾಲಕರಿಗೆ ತಿಳಿಸಬೇಕು. ಬಳಿಕ ಪೊಲೀಸರ ಸಹಾಯ ಪಡೆಯಬೇಕು. ಸರ್ಕಾರ ನೀಡಿದ ಸಹಾಯವಾಣಿಗಳ ಬಳಕೆ ಮಾಡಬೇಕು ಎಂದು ಅವರು ಸಲಹೆ ಮಾಡಿದರು.

ಹೆಣ್ಣು ಮಕ್ಕಳು ಆರೋಗ್ಯದಿಂದಿದ್ದು, ಶಿಕ್ಷಣ ಪಡೆದು, ಆರ್ಥಿಕವಾಗಿ ಸಬಲರಾದಾಗ ಮಾತ್ರ ಸಮಾಜ ಸುಧಾರಣೆ ಸಾಧ್ಯವಾಗುತ್ತದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದಾರೆ. ಇಂತಹ ವಿಷಯಗಳನ್ನು ಅರಿತು ಮುನ್ನಡೆಯಬೇಕು ಎಂದು ಅವರು ಸಲಹೆ ಮಾಡಿದರು.


ಕಾಲೇಜಿನಿಂದ ಊರಿಗೆ ಹೋಗಿ ಬರಲು ನಮ್ಮೂರಿಗೆ ಸರಿಯಾದ ಬಸ್ಸಿನ ವ್ಯವಸ್ಥೆ ಇಲ್ಲ. ಬಸ್ಸಿಲ್ಲದ ವೇಳೆ ನಾನು ನಡೆದುಕೊಂಡೇ ಬರುತ್ತೇನೆ ಎಂದು ವಿದ್ಯಾರ್ಥಿನಿಯರು ಸಂವಾದದಲ್ಲಿ ತಿಳಿಸಿದರು.

ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅವರು ನಿರಂತರವಾಗಿ ಗಂಟೆಗೂ ಹೆಚ್ಚು ಕಾಲ ಸಂವಾದ ನಡೆಸಿದರು. 

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ‌ ಶರಣಮ್ಮ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ.ಯಂಕಣ್ಣ , ಸಹಾಯಕ ಪ್ರಾಧ್ಯಾಪಕ ಡಾ.ಸಂತೋಷ ಕುಮಾರ್, ಸಹಾಯಕ ಪ್ರಾಧ್ಯಾಪಕ ಮಹದೇವಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಕುಮಾರ್  ಸೇರಿದಂತೆ ಇತರರು ಇದ್ದರು. 



Comments

Popular posts from this blog