ಬೊಮ್ಮನಾಳ ಗ್ರಾಮದಲ್ಲಿ ಕ್ರೈಸ್ತ ಅಭಿವೃದ್ಧಿ ನಿಗಮದಿಂದ ಮಂಜೂರಾಗಿರುವ ಅನುದಾನದಲ್ಲಿ ನವೀಕೃತ ಚರ್ಚ್ ಕಾಮಗಾರಿಗೆ ಭೂಮಿ ಪೂಜೆ
ಬೊಮ್ಮನಾಳ ಗ್ರಾಮದಲ್ಲಿ ಕ್ರೈಸ್ತ ಅಭಿವೃದ್ಧಿ ನಿಗಮದಿಂದ ಮಂಜೂರಾಗಿರುವ ಅನುದಾನದಲ್ಲಿ ನವೀಕೃತ ಚರ್ಚ್ ಕಾಮಗಾರಿಗೆ ಭೂಮಿ ಪೂಜೆ ರಾಯಚೂರು, ಜೂ.೧6-ಮನುಷ್ಯನನ್ನು ಕಷ್ಟದಿಂದ ಪಾರು ಮಾಡಿ ಆತ ಮಾಡಿದ ಕೆಟ್ಟ ಕೆಲಸಗಳನ್ನು ಕ್ಷಮಿಸಲು ಆರಾಧನಾ ಸ್ಥಳವಾಗಿ ಪ್ರಾರ್ಥನಾ ಮಂದಿರ ಬೇಕು ಎಂದು ಸಿರವಾರ ಜಿಲ್ಲಾ ಮೇಲ್ವಿಚಾರಕ ರೆವರೆಂಡ್ ಸನತ್ ಸತಿಶಕುಮಾರ್ ಹೇಳಿದರು.
ಇಂದು ದೇವದುರ್ಗ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ಕರ್ನಾಟಕ ಸರ್ಕಾರದ ಕ್ರೈಸ್ತ ಅಭಿವೃದ್ಧಿ ನಿಗಮದಿಂದ ಮಂಜೂರಾಗಿರುವ ನವೀಕೃತ ಚರ್ಚ್ ಕಾಮಗಾರಿಗೆ ಭೂಮಿ ಪೂಜೆ ಜರುಗಿಸಿ ಮಾತನಾಡಿದ ಅವರು ಪ್ರತಿಯೊಬ್ಬರಿಗೆ ತನ್ನ ಧಾರ್ಮಿಕ ವಿಧಿ ವಿಧಾನ ಅನುಸರಿಸಲು ಮತ್ತು ಸಾಮೂಹಿಕ ಪ್ರಾರ್ಥನೆ ಮಾಡಲು ಪ್ರಾರ್ಥನಾ ಮಂದಿರ ಬೇಕು ಆ ದಿಶೆಯಲ್ಲಿ ಈ ಗ್ರಾಮದಲ್ಲಿ ನವೀಕೃತ ಚರ್ಚ್ ಕಾಮಗಾರಿ ಆರಂಭವಾಗುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಪರಮ ಪವಿತ್ರನಾದ ಯೇಸು ನಮ್ಮಲ್ಲಿರುವ ಕಷ್ಟಗಳನ್ನು ನಿವಾರಿಸಿ ಮತ್ತು ನಮ್ಮ ಪಾಪಗಳನ್ನು ಕ್ಷಮೆ ಮಾಡಿ ಸನ್ಮಾರ್ಗದಲ್ಲಿ ಕಳಿಸುವುದರ ಜೊತೆಗೆ ನಮಗೆ ಆಯುರ್ ಆರೋಗ್ಯ ನೀಡುವ ದೇವರಾಗಿದ್ದುಘಿ, ಆತನ ಪ್ರಾರ್ಥನೆಗೆ ಒಂದು ಆರಾಧನಾ ಸ್ಥಾನ ಅಗತ್ಯ. ಆ ದಿಶೆಯಲ್ಲಿ ಕರ್ನಾಟಕ ಸರ್ಕಾರ ಕ್ರೈಸ್ತ ಸಮುದಾಯಕ್ಕೆ ಅನುಕೂಲ ಮಾಡಿಕೊಟ್ಟಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದೇವರ ಆಶೀರ್ವಾದ, ಆರೋಗ್ಯ ಪ್ರಾಪ್ತಿಘಿ ಮತ್ತು ನೆಮ್ಮದಿ ಬದುಕಿಗೆ ಪ್ರಾರ್ಥನಾ ಅಗತ್ಯ. ಆ ದಿಶೆಯಲ್ಲಿ ನೀವೆಲ್ಲರೂ ಪರಮಪವಿತ್ರನಾದ ಯೇಸುವಿನಲ್ಲಿ ಪ್ರಾರ್ಥಿಸಿ ನಿಮ್ಮ ಕಷ್ಟ-ಕಾರ್ಪಣ್ಯಗಳನ್ನು ನಿವಾರಣೆ ಮಾಡಿಕೊಳ್ಳಿ ಎಂದು ಕ್ರೈಸ್ತ ಸಮುದಾಯದವರಿಗೆ ಬೋಧಿಸಿದರು.
ಯಾದಗಿರಿಯ ಚಿರಂಜೀವಿ ಮೆಥೋಡಿಸ್ಟ್ ಹೈಸ್ಕೂಲ್ನ ಪ್ರಾಚಾರ್ಯ ಜಯಪಾಲ್ ಎಲೀಶ್ ಮಾತನಾಡಿ, ಬೊಮ್ಮನಾಳ ಗ್ರಾಮದಲ್ಲಿ ಕ್ರೈಸ್ತ ಪರಂಪರೆ ಬೆಳೆಯಲು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಚರ್ಚ್ ನಿರ್ಮಾಣ ಎಂದರೆ ಕೇವಲ ಕಟ್ಟಡ ಅಲ್ಲ ಅದು ಧಾರ್ಮಿಕ ಭಾವನೆಗಳ ಶ್ರದ್ಧಾ ಕೇಂದ್ರ.ಇಂತಹ ಪ್ರಾರ್ಥನಾ ಕೇಂದ್ರಗಳ ನಿರ್ಮಾಣದಿಂದ ಶಿಕ್ಷಣ, ಧಾರ್ಮಿಕ ಜಾಗೃತಿ ಬೆಳೆಯುತ್ತದೆ. ಆ ದಿಶೆಯಲ್ಲಿ ನೂತನವಾಗಿ ನವೀಕೃತಗೊಳ್ಳುತ್ತಿರುವ ಚರ್ಚ್ ಸಮುದಾಯದ ಏಳಿಗೆಗೆ ಅನುಕೂಲವಾಗುತ್ತದೆ ಎಂದರು.
ಸುದ್ದಿಮೂಲ ಪತ್ರಿಕೆಯ ಮುಖ್ಯ ವರದಿಗಾರ ಬಿ. ವೆಂಕಟ್ಸಿಂಗ್ ಮಾತನಾಡಿ, ಕಳೆದ ೩ ತಲೆಮಾರಿನಿಂದ ಗ್ರಾಮದ ಕ್ರೈಸ್ತ ಸಮುದಾಯದವರೊಂದಿಗೆ ಹೊಂದಿದ ಬಾಂಧವ್ಯವನ್ನು ವಿವರಿಸಿ, ಬಾಲ್ಯದಲ್ಲಿ ಈ ಗ್ರಾಮದಲ್ಲಿರುವ ಪಾದ್ರಿಗಳ ಪ್ರೇರಣೆ ಭವಿಷ್ಯದಲ್ಲಿ ತಮಗೆ ಶಿಕ್ಷಣ ಪಡೆಯಲು ಸಹ ತಮಗೆ ಅನುಕೂಲವಾಯಿತೆಂದು ಹೇಳುವುದಲ್ಲದೆ, ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಸಲಹೆ ಮಾಡಿದರು. ತಮ್ಮ ಧರ್ಮವನ್ನು ಪೂಜಿಸಬೇಕು. ಪರಧರ್ಮವನ್ನು ಗೌರವಿಸಬೇಕು ಮತ್ತು ಗ್ರಾಮದಲ್ಲಿ ಎಲ್ಲಾ ಧರ್ಮದವರು ಪರಸ್ಪರ ಪ್ರೀತಿ, ಗೌರವದಿಂದ ಬಾಳಬೇಕು. ಆಗ ಮಾತ್ರ ಗ್ರಾಮದಲ್ಲಿ ಅಭಿವೃದ್ಧಿ ಸಾದ್ಯ ಎಂದರು.
ಪ್ರಾಸ್ತಾವಿಕವಾಗಿ ಆರಂಭದಲ್ಲಿ ಚಂದ್ರಶೇಖರ್ ಮಾತನಾಡಿ, ಈ ಗ್ರಾಮದಲ್ಲಿ ಕ್ರೈಸ್ತ ಸಮುದಾಯದವರು ಶೈಕ್ಷಣಿಕ ಮತ್ತು ಧಾರ್ಮಿಕ ಜಾಗೃತಿಗೆ ಈ ಹಿಂದೆಯೇ ಕಳೆದ ೫ ದಶಕಗಳ ಹಿಂದೆ ಚರ್ಚ್ ನಿರ್ಮಾಣವಾಗಿತ್ತು. ಅದು ಶಿಥಿಲಗೊಂಡ ಪರಿಣಾಮ ಈಗ ನವೀಕೃತ ಚರ್ಚ್ ನಿರ್ಮಾಣವಾಗುತ್ತಿದ್ದು, ಇದು ಈ ಗ್ರಾಮದ ಕ್ರೈಸ್ತ ಬಾಂಧವರ ಧಾರ್ಮಿಕ ಭಾವನೆಗಳನ್ನು ಇಮ್ಮಡಿಗೊಳಿಸಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಆರಂಭದಲ್ಲಿ ಗ್ರಾಮದ ಕ್ರೈಸ್ತ ಸಮುದಾಯದ ಮುಖಂಡ ಸೈಮನ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಮಾಡಿಗಿರಿ ಮೆಥೋಡಿಸ್ಟ್ ಚರ್ಚ್ನ ಸಭಾಪಾಲಕ ಜೆ.ಎಸ್. ರಾಜು, ಬೊಮ್ಮನಾಳ ಮೆಥೋಡಿಸ್ಟ್ ಚರ್ಚ್ನ ಸಭಾಪಾಲಕ ಜಯಶೀಲ್ , ಪ್ರಕಾಶ ಹೊನ್ನಟಗಿ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಿಗೆ ಸನ್ಮಾನಿಸಿದರು. ಆರಂಭದಲ್ಲಿ ರೆವರೆಂಡ್ ಡಾ. ಸನತ್ಕುಮಾರ್ ಏರಿದಂತೆ ಸಭೆಯಲ್ಲಿ ಸೇರಿದ ಎಲ್ಲರಿಂದ ಸಾಮೂಹಿಕ ಪ್ರಾರ್ಥನೆ ನಡೆಯಿತು.
ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಮಂಜೂರಾದ ೫೦ ಲಕ್ಷ.ರೂ. ಅನುದಾನದ ಪೈಕಿ ಮೊದಲ ಕಂತಿನಲ್ಲಿ ೨೫ ಲಕ್ಷ ರೂ ಬಿಡುಗಡೆಯಾಗಿದ್ದು ಆ ಅನುದಾನದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ರೋಬೆನಪ್ಪ, ಯೇಸಪ್ಪ ದರ್ಜಿ, ದೇವಪುತ್ರಪ್ಪ, ಯೇಸಪ್ಪ ಬೇಲ್ದಾರ್, ಹನುಮಂತ ಡೇವಿಡ್, ಸ್ಯಾಮವೇಲ್, ದೊಡ್ಡ ಬೆಂಜಾಮಿನ, ರಾಜು ಬೊಮ್ಮನಾಳ, ರವಿ ಶೇಖರಪ್ಪ, ರವಿ ಡೇವಿಡ್, ಶಾಂತರಾಜು ಇನ್ನಿತರರು ಇದ್ದರು.


Comments
Post a Comment