ಮತಗಳ್ಳತನ ವಿರುದ್ಧ ಜಿಲ್ಲಾ ಕಾಂಗ್ರೆಸ್ ಸಹಿ ಸಂಗ್ರಹ ಹಾಗೂ ಪ್ರತಿಭಟನೆ. ಜಯ ಧ್ವಜ ನ್ಯೂಸ್ , ರಾಯಚೂರು, ಅ.13- ಇಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದ ವೋಟ್ ಚೋರ್ ಗದ್ದಿ ಚೋಡ್ ಸಹಿ ಸಂಗ್ರಹ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಎ.ವಸಂತಕುಮಾರ ಅವರು ಮತಗಳ್ಳತನ ಎನ್ನುವದು ಬಿಜೆಪಿಯ ನಿಜಬಣ್ಣವಾಗಿದೆ ಎಂದು ಆರೋಪಿಸಿದರು. ನ್ಯಾಯಯುತ ಚುನಾವಣೆ ನಡೆದರೆ ಬಿಜೆಪಿ ಪಕ್ಷ ಒಂದೂ ಚುನಾವಣೆ ಗೆಲ್ಲಲು ಸಾಧ್ಯವಾಗುವುದಿಲ್ಲ, ಲೋಕಸಭಾ, ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮತದಾರರನ್ನು ಹುಡುಕಿ ಹುಡುಕಿ ತೆಗೆದುಹಾಕುವದು ಮತ್ತು ತಮಗೆ ಬೇಕಾದ ಮತದಾರರನ್ನು ಅಕ್ರಮ ವಾಗಿ ಸೇರಿಸುವ ಮೂಲಕ ಚುನಾವಣೆ ಗೆಲ್ಲುವ ತಂತ್ರಗಾರಿಕೆ ಮಾಡುತ್ತಿರುವದು ದೇಶದ ಸಂವಿಧಾನಕ್ಕೆ ಮಾಡುವ ಅವಮಾನವಾಗಿದೆ ಎಂದು ಹೇಳಿದರು.
ಚುನಾವಣೆಗಳು ಪಾರದರ್ಶಕ ವಾಗಿ ನಡೆಯಬೇಕು, ಪ್ರತಿಯೊಬ್ಬ ನಾಗರಿಕರಿಗೆ ಮತದಾನದ ಹಕ್ಕು ದೊರೆಯಬೇಕು, ಮತಗಳ್ಳತನ ನಡೆಯಬಾರದೆಂದು ನಮ್ಮ ಪಕ್ಷದ ಮುಖಂಡರಾದ ರಾಹುಲ್ ಗಾಂಧಿ ಅವರು ಹೋರಾಟ ಮಾಡಿರುವದರಿಂದಲೇ ಇಂದು ಚುನಾವಣಾ ಆಯೋಗ ಮತದಾರರ ಹೆಸರು ಸೇರ್ಪಡೆ ಮತ್ತು ತೆಗೆದುಹಾಕಲು ಓಟಿಪಿ ಮಾದರಿ ಜಾರಿಗೊಳಿಸಿದೆ, ಇದು ನಮ್ಮ ಹೋರಾಟಕ್ಕೆ ಸಿಕ್ಕಗೆಲುವು ಅಲ್ಲದೇ ಸುಪ್ರೀಂಕೋರ್ಟ್ ಮದ್ಯಪ್ರವೇಶ ಮಾಡಿ ಚುನಾವಣಾ ಆಯೋಗಕ್ಕೆ ಹಲವು ನಿರ್ದೇಶನ ನೀಡಿದೆ ಎಂದರು.
ಎಐಸಿಸಿ ರಾಷ್ಟ್ರೀಯ ಕಾರ್ಯದರ್ಶಿ ಗೋಪಿನಾಥ ಪಳನಿಯಪ್ಪನ್, ಗ್ರಾಮೀಣ ಶಾಸಕ ಬಸನಗೌಡ ದದ್ದಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಪಾಟೀಲ ಇಟಗಿ ಮಾಜಿ ವಿಧಾನ ಪರಿಷತ್ ಸದಸ್ಯ ಶರಣಪ್ಪ ಮಟ್ಟೂರು, ಕೆ.ಶಾಂತಪ್ಪ ಇತರರು ಮಾತನಾಡಿದರು.
ಈ ಪ್ರತಿಭಟನೆಯಲ್ಲಿ ರಾಜಶೇಖರ ರಾಮಸ್ವಾಮಿ ಪಾಮಯ್ಯ ಮುರಾರಿ, ಡಾ.ರಝಾಕ ಉಸ್ತಾದ, ಕೆ.ಅಸ್ಲಂ ಪಾಶಾ, ಅಬ್ದುಲ್ ಕರೀಂ, ಆಂಜನೇಯ ಕುರುಬದೊಡ್ಡಿ, ಡಿ.ಕೆ.ಮುರಳಿ ಯಾದವ, ನಿರ್ಮಲಾ ಬೆಣ್ಣೆ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
Comments
Post a Comment