ಗುರುಪೂರ್ಣಿಮೆ ಮಹೋತ್ಸವದಲ್ಲಿ ಶೈಕ್ಷಣಿಕ ಸೇವೆಗೆ ಚಾಲನೆ: ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ನೆರವು ನೀಡುವ ಯೋಜನೆ ಆರಂಭ- ಸಾಯಿ ಕಿರಣ ಆದೋನಿ ಜಯ ಧ್ವಜ ನ್ಯೂಸ್ ,ರಾಯಚೂರು, ಜು.29- ಗುರುಪೂರ್ಣಿಮೆಯ ಅಂಗವಾಗಿ ನಗರದ ಓಂ ಸಾಯಿ ಧ್ಯಾನ ಮಂದಿರದಲ್ಲಿ ಬುಧವಾರ ಭಕ್ತಿಭಾವದಿಂದ ಗುರುಪೂರ್ಣಿಮಾ ಮಹೋತ್ಸವ ಆಚರಿಸಲಾಯಿತು. ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ಶ್ರೀ ಶಿರಡಿ ಸಾಯಿಬಾಬಾರ ದರ್ಶನ ಪಡೆದು ವಿಶೇಷ ಪೂಜೆಗಳಲ್ಲಿ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡುವ ಯೋಜನೆಗೂ ಚಾಲನೆ ನೀಡಲಾಯಿತು. ಧ್ಯಾನ ಮಂದಿರದ ಸಂಸ್ಥಾಪಕ ಧರ್ಮಾಧಿಕಾರಿ ಸಾಯಿ ಕಿರಣ ಆದೋನಿ ಮಾತನಾಡಿ, ಗುರುಪೂರ್ಣಿಮೆಯು ಗುರು ಪರಂಪರೆಯನ್ನು ಸ್ಮರಿಸುವ ಪವಿತ್ರ ಹಬ್ಬವಾಗಿದೆ. ಧಾರ್ಮಿಕ ಆಚರಣೆಗಳ ಜೊತೆಗೆ ಸಮಾಜಮುಖಿ ಸೇವೆಗಳನ್ನು ಕೈಗೊಳ್ಳುವುದು ಸಾಯಿಬಾಬರ ಸಂದೇಶವಾಗಿದೆ ಎಂದು ಹೇಳಿದರು. ಈ ಬಾರಿ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿ ಶಿರಡಿಯಿಂದ ತರಲಾಗಿರುವ ಶ್ರೀ ಸಾಯಿಬಾಬಾ ಧರಿಸಿದ್ದ ಪವಿತ್ರ ಕಾಫ್ನಿಯ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಪವಿತ್ರ ವಸ್ತ್ರದ ಸಮ್ಮುಖದಲ್ಲೇ ಸಮಾಜಕ್ಕೆ ಉಪಯುಕ್ತವಾಗುವ ಶಾಶ್ವತ ಸೇವಾ ಕಾರ್ಯ ಆರಂಭಿಸುವ ಸಂಕಲ್ಪದೊಂದಿಗೆ ಶ್ರೀ ಶಿರಡಿ ಸಾಯಿಬಾಬಾ ಸೇವಾ ಚಾರಿಟೇಬಲ್ ಟ್ರಸ್ಟ್, ಅಮೆರಿಕದ ಸಾಫ್ಟ್ವೇರ್ ಇಂಜಿನಿಯರ್ ಅಭಿಲಾಷ್ ಚಕ್ಷಾ, ಸ...